ನಾವು ಸಾಧಾರಣವಾಗಿ ಎರಡು ಜಗತ್ತುಗಳಲ್ಲಿ ಜೀವಿಸುತ್ತೇವೆ. ಒಂದು ಹೊರಗಿನದು, ಮತ್ತೊಂದು ಒಳಗಿನದು. ಪುರಾತನ ಕಾಲದಿಂದಲೂ ಮಾನವ ಪ್ರಗತಿಯು ಈ ಎರಡು ಜಗತ್ತುಗಳಲ್ಲಿಯೂ ಸಮಾನಾಂತರವಾಗಿ ಸಾಗಿ ಬಂದಿದೆ. ಅನ್ವೇಷಣೆಯು ಪ್ರಾರಂಭವಾದುದು ಹೊರಗಿನ ಜಗತ್ತಿನಲ್ಲಿ. ಮಾನವನು ತನ್ನ ಅಂತರಂಗದ ಅಗಾಧ ಪ್ರಶ್ನೆಗಳಿಗೆ ಉತ್ತರಗಳನ್ನು ಮೊಟ್ಟ ಮೊದಲು ಹುಡುಕಿದುದು ಬಾಹ್ಯ ಪ್ರಕೃತಿಯಲ್ಲಿ. ತನ್ನ ಹೃದಯದಲ್ಲಿ ಉತ್ಪನ್ನವಾದ ಸೌಂದರ್ಯತೃಷೆಯನ್ನೂ, ಭವ್ಯತಾಪಿಪಾಸೆಯನ್ನೂ ತೃಪ್ತಿ ಪಡಿಸಲು ಸುತ್ತಮುತ್ತಣ ಸನ್ನಿವೇಶದ ಸಹಾಯವನ್ನು ಕೋರಿದನು; ತನ್ನನ್ನು ಮತ್ತು ತನ್ನ ಅನುಭವಗಳನ್ನು ಸ್ಥೂಲವಾದ ಮತ್ತು ಪಂಚೇಂದ್ರಿಯ ಸುಲಭ ವಾದ ವಾಸ್ತವಿಕ ರೀತಿಯಲ್ಲಿ ವ್ಯಕ್ತಗೊಳಿಸಲು ಯತ್ನಿಸಿದನು; ಅದರ ಫಲವಾಗಿ ಭವ್ಯವಾದ ಮಹತ್ತಾದ ಉತ್ತರಗಳು ಮೂಡಿದುವು. ಈಶ್ವರನ ಮತ್ತು ಆತನ ಆರಾಧನೆಯ ವಿಚಾರವಾಗಿ ಅದ್ಭುತ ಭಾವನೆಗಳು ಹೊರಹೊಮ್ಮಿ ದವು. ನಿಜವಾಗಿಯೂ ಈ ಬಾಹ್ಯ ಪ್ರಕೃತಿಯ ಅನ್ವೇಷಣೆಯಿಂದ ಅತ್ಯಂತ ಸುಂದರವೂ ಭಾವಪೂರ್ಣವೂ ಆದ ಕಲ್ಪನೆಗಳು ಮೈದೋರಿದುವು. ಆದರೆ ಕೆಲವು ಕಾಲಾನಂತರದಲ್ಲಿ ಆ ಬಹಿರನ್ವೇಷಣೆಯು ಅಂತರ್ಮುಖವಾಗಿ, ಮನುಷ್ಯನ ದೃಷ್ಟಿಗೆ ಹಿಂದೆ ತೋರಿದುದಕ್ಕಿಂತಲೂ ಅತಿಶಯವಾದ ಭವ್ಯವೂ, ಸುಂದರವೂ, ಅನಂತ ವಿಸ್ತೃತವೂ ಆದ ಮತ್ತೊಂದು ಮಹತ್ತರ ಜಗತ್ತು ಗೋಚರವಾಯಿತು. ವೇದಭಾಗವಾದ ಕರ್ಮಕಾಂಡದಲ್ಲಿ ಅದ್ಭುತ ಧಾರ್ಮಿಕ ಭಾವನೆಗಳಿವೆ. ಸೃಷ್ಟಿ ಸ್ಥಿತಿ ಲಯಕರ್ತನಾದ ಏಕಮಹೇಶ್ವರನ ವಿಚಾರವಾಗಿ ಅದ್ಭುತವಾದ ಕಲ್ಪನೆಗಳಿವೆ. ಹೃದಯವನ್ನು ಕಲಕುವ ಭಾಷೆ ಯಲ್ಲಿ ಆ ಈಶ್ವರನನ್ನು ವರ್ಣಿಸಿದ್ದಾರೆ. ನಿಮ್ಮಲ್ಲನೇಕರಿಗೆ ಋಗ್ವೇದ ಸಂಹಿತೆಯಲ್ಲಿರುವ ಸೃಷ್ಟಿ ವರ್ಣನೆಯ ಮಹಾಶ್ಲೋಕವು (ನಾಸದೀಯ ವೇದಾಂತ ಸೂಕ್ತ) ನೆನಪಿನಲ್ಲಿರಬಹುದು. ಬಹುಶಃ ಅದಕ್ಕಿಂತಲೂ ಭವ್ಯತರವಾದ ಮತ್ತೊಂದು ಕವನ ಇದುವರೆಗೆ ನಿರ್ಮಿತವಾಗಿಲ್ಲ ಎಂದು ಹೇಳಿದರೆ ಅತಿ ಶಯೋಕ್ತಿಯಾಗಲಾರದು.Our other books here can be searched using#SRKAshramaMysore